Our book with Wiley on AI

Thanks, Nisha. Thanks for your kind words. I learned a lot from you, Wil and Michael. I enjoyed being your editor! I benefited greatly from ...

Friday, October 14, 2016

ಸ್ವಾತಂತ್ರ್ಯ

ಸ್ವಾತಂತ್ರ್ಯ

ಊರಿನ ದ್ವಾರದ ಬಳಿ,
ನಿಮ್ಮ ಹೊಡಸಲು ಬೆಂಕಿ ಪಕ್ಕದಲ್ಲಿ
ನಿಮ್ಮದೇ, ಸ್ವಾತಂತ್ರ್ಯವನ್ನು ಪೂಜಿಸಲು ನಿವು
ಬಾಗಿ ನಮಸ್ಕರಿಸಿದ್ದುದನ್ನು ನಾನು ನೋಡಿದ್ದೇನೆ.

ಹೇಗೆ ಗುಲಾಮರು
ಅವರನ್ನು ಕತ್ತರಿಸುತ್ತಾ ಇದ್ದರೂ ಆ
ಕ್ರೂರಿಯನ್ನು ಹೇಗೆ ಹೊಗಳುತ್ತಾರೋ ಹಾಗೆ.

ದೇಗುಲದ ಗರ್ಭದಲ್ಲಿ, ಪೀಠದ ನೆರಳಿನಲ್ಲಿ,
ನಿಮ್ಮಲಿರೋ ಅತೀ ಸ್ವತಂತ್ರರು,
ತಮ್ಮ ಸ್ವಾತಂತ್ರ್ಯವನ್ನು ಹೆಗಲ
ಮೇಲಿನ ನೊಗದಂತೆ, ಕೈ ಬೇಡಿಯಂತೆ
ಧರಿಸಿದ್ದನ್ನು ನೋಡಿದ್ದೇನೆ.

ನನ್ನ ಹೃದಯದಿಂದ ರಕ್ತ ಹರಿದು ಬಂತು
ಯಾಕೆಂದ್ರೆ, ಯಾವಾಗ ಸ್ವಾತಂತ್ರ್ಯವನ್ನು
ಹುಡುಕುವುದು ಸಹ ನಿಮಗೆ ಭಾರವಗುತ್ತದೋ,
ಆಗ
ನೀವು ಸ್ವತಂತ್ರರು,

ಯಾವಾಗ ನೀವು ಸ್ವಾತಂತ್ರ್ಯವನ್ನು ಒಂದು
ಗುರಿ ಅಥವಾ ಸಾಕ್ಷಾತ್ಕಾರವಾಗಿ
ಸಹಿತ ಎಣಿಸುವುದಿಲ್ಲವೋ,
ಆಗ
ನೀವು ಸ್ವತಂತ್ರರು,

ನಿಜವಾಗಿ, ನಿಮ್ಮ ದಿನಗಳು ಯಾವುದೇ ಜವಾಬ್ದಾರಿ ಇಲ್ಲದೇ
ನಿಮ್ಮ ರಾತ್ರಿಗಳು ಆಸೆಯಿಲ್ಲದೆ ನೋವಿಲ್ಲದೇ
ಇರುವುದು ಸ್ವಾತ0ತ್ರ್ಯ ಅಲ್ಲ.

ಇವೆಲ್ಲ ನಿಮ್ಮ ಜೀವನವನ್ನು ಮುತ್ತಿ ಸುತ್ತಿ ಬಿಗಿದರೂ
ಅದನ್ನು ಮೀರಿ, ನಿರ್ಭಂಧವಾಗಿ
ನಿಷ್ಕಳ0ಕವಾಗಿ ಏಳುವುದೇನಿದೆ,-
ಅದು ಸ್ವಾತಂತ್ರ್ಯ.

ಅದಲ್ಲದೆ,
ಮಧ್ಯಾಹ್ನದ ಘಳಿಗೆಯಲ್ಲಿ ಬಂಧಿಸಿದ
ನಿಮ್ಮ ಮುಂಜಾವಿನ
ತಿಳುವಳಿಕೆಯ ಸರಪಳಿಯನ್ನು
ಹರಿಯದೆ, ಅದು ಹೇಗೆ ನಿಮ್ಮ
ಹಗಲೂ-ರಾತ್ರಿಗಳನ್ನು ಮೆಟ್ಟಿ
ಮೇಲೇರುತ್ತೀರಾ?

ಸತ್ಯ ಹೇಳಬೇಕಾದರೆ
ಯಾವುದು ನೀವು ಸ್ವಾತಂತ್ರ್ಯ ಅಂದುಕೊಂಡಿದ್ದೀರೋ
ಅದು, ಈ ಎಲ್ಲಾ ಬಂಧನಗಳ ಸರಪಳಿಗಳಲ್ಲಿ
ಅತೀ ಬಲಶಾಲಿಯಾದದ್ದು;

ಅದರ ಕೊಂಡಿಗಳೇನೋ ಹಗಲಲ್ಲಿ
ಹೊಳೆದು ನಿಮ್ಮ ಕಣ್ಣು ಕುಕ್ಕಿ
ಸೆಳೆದಿರಬಹುದು.

ಆದರೆ ನೀವು ಸ್ವತಂತ್ರರಾಗಬೇಕಾದರೆ,
ನೀವು ನಿಮ್ಮ ತುಣುಕುಗಳನ್ನೇ,
ತೆಗೆದುಹಾಕುವುದಲ್ಲದೇ ಮತ್ತೇನು?

ಕಾನೂನು ಅನ್ಯಾಯವಾಗಿದ್ದರೆ, ನೀವು ಅದನ್ನು
ರದ್ದು ಗೊಳಿಸುತ್ತೀರಿ;
ಆದರೆ ಆ ಕಾನೂನು ನಿಮ್ಮ ಕೈಯಾರೆ, ನೀವೇ ನಿಮ್ಮ
ಹಣೆಯ ಮೇಲೆ ಬರೆದಿದ್ದಾಗಿತ್ತು.

ನಿಮ್ಮ ನ್ಯಾಯ ಪುಸ್ತಕಗಳನ್ನು
ಸುಟ್ಟು, ದನ್ನು ತೆಗೆದು ಹಾಕಲಾಗುವುದಿಲ್ಲ.
ಅಥವಾ ನ್ಯಾಯಾಧೀಶನ ಹಣೆಮೇಲೆ
ಸಮುದ್ರ ಹೊಯ್ದ ತಿಕ್ಕಿ,
ತೊಳೆಯಲಾಗುವುದಿಲ್ಲ.

ಒಂದು ವೇಳೆ ನೀವು ಒಬ್ಬ ಕ್ರೂರ
ರಾಜನನ್ನು, ತೆಗೆದು ಹಾಕುವುದಾದರೆ
ಮೊದಲು, ನಿಮ್ಮ ಒಳಗೆ ಸ್ಥಾಪಿತವಾಗಿರುವ ಅವನ
ಸಿಂಹಾಸನವನ್ನು ಬಿಸಾಕಿ.
ಯಾಕೆಂದ್ರೆ, ಸ್ವತಂತ್ರರು ಮತ್ತು
ಸ್ವಾಭಿಮಾನಿಗಳನ್ನು ಯಾವ ಕ್ರೂರಿ
ದಬ್ಬಾಳಿಕೆ ಮಾಡಲು ಸಾಧ್ಯ?

ಅದು ಸಾಧ್ಯ,
ಅವರ ಸ್ವಾತಂತ್ರ್ಯದಲ್ಲೆ ದಬ್ಬಾಳಿಕೆ,
ಅದರ ಸ್ವಾಭಿಮಾನದಲ್ಲೇ ಅಪಮಾನ
ಇದ್ದರೆ ಮಾತ್ರ.

ಹಾಗೂ, ಒಂದು ವೇಳೆ ನೀವು ಬಿಡಬೇಕಾದ್ದು
ಜವಾಬ್ದಾರಿ ಅಂತಾದರೆ,
ಅದು ನಿಮ್ಮ ಮೇಲೆ ಹೊರಿಸಿದಕ್ಕಿಂತಲೂ
ಹೆಚ್ಚಾಗಿ ನೀವೇ ಆರಿಸಿ ಕೊಂಡಿದ್ದು.

ಮತ್ತೆ ಒಂದು ವೇಳೆ,
ನೀವು ತೊಗಲಿಸಬೇಕಾದ್ದು ಭಯ
ಅಂತಾದರೆ, ಆ ಭಯದ ಮೂಲ ಆಶ್ರಯ
ಹೆಚ್ಚಾಗಿ ನಿಮ್ಮ ಹೃದಯದಲ್ಲಿದೆ, ಹೆದರಿಸುವವನ
ಕೈಯಲ್ಲಲ್ಲ.

ಇದೆಲ್ಲವೂ ನಿಮ್ಮ ಗೊ0ದಲದ ಅಪ್ಪಿಗೆಯಲ್ಲಿ
ಸತತವಾಗಿ ಚಲಿಸುತ್ತಿದೆ-
ಆಸೆ ಪಟ್ಟಿದ್ದು ಮತ್ತು ಭಯ ಪಟ್ಟಿದ್ದು,
ಅಸಹ್ಯ ಪಟ್ಟಿದ್ದು ಮತ್ತು ಆನಂದ ಪಟ್ಟಿದ್ದು
ಅನುಸರಿಸಿ ಹೋಗಿದ್ದು, ಮತ್ತು ಬಿಟ್ಟು ಓಡಿದ್ದು,

ಇದು ನಿಮ್ಮೊಳಗೆ ಬೆಳಕು ಮತ್ತು
ನೆರಳು ಜೊತೆಯಾಗಿ ಚಲಿಸಿದಂತೆ
ಚಲಿಸುತ್ತವೆ.

ಯಾವಾಗ ನೆರಳು ಅಳಿಸಿ ಮಾಯವಾಗುತ್ತದೋ
ಆಗ ಇದ್ದುಳಿದ ಬೆಳಕು
ಇನ್ನೊಂದು ಬೆಳಕಿನ ನೆರಳಾಗುತ್ತದೆ.

ಹಾಗೇ, ನಿಮ್ಮ ಸ್ವಾತಂತ್ರ್ಯ ಯಾವಾಗ ಅದರ
ಬಂಧನಗಳನ್ನು ಕಳೆದುಕೊಳ್ಳುತ್ತದೋ
ಆಗ ಅದೇ ಇನ್ನೂ ದೊಡ್ಡದಾದ ಸ್ವಾತಂತ್ರ್ಯಕ್ಕೆ
ಬಂಧನವಾಗುತ್ತದೆ.

* * *

ಖಲಿಲ್ ಗಿಬ್ರಾನ್ - ಕನ್ನಡಕ್ಕೆ ಶೇಷಗಿರಿ ಹೆಗಡೆ